Saturday, April 22, 2006

ಕನ್ನಡ-ಇಂಗ್ಲಿಷ್ ಒಂದು ಅರ್ಥಪೂರ್ಣ ಚರ್ಚೆ


'ಕನ್ನಡಕೆ ಹೋರಾಡು ಇಂಗ್ಲೀಷು ಕಂದ' ಪೋಸ್ಟಿಗೆ- ಅನ್ವೇಷಿ, ಕನ್ನಡ ಸಾರಥಿ ಮತ್ತು ಶ್ರೀ ಸಂಜಯ ರಿಂದ ಅರ್ಥಪೂರ್ಣ ಪ್ರತಿಕ್ರಿಯೆ ಬಂದಿದೆ. ಸಂಜಯ ಅವರು ಹೇಳಿರುವಂತೆ ಇದು ಮಹತ್ವದ ವಿಷಯವೇ. ಕನ್ನಡ-ಇಂಗ್ಲಿಷ್ ಕಲಿಕೆಯ ವಿಷಯ ಇಂದು ರಾಜ್ಯದಲ್ಲಿ ಭಾರಿ ವಿವಾದವನ್ನೇ ಹುಟ್ಟು ಹಾಕಿದೆ.

"ಜಾಗತೀಕರಣದ ಇಂದಿನ ದಿನಗಳಲ್ಲಿ "ಸ್ವಾವಲಂಬಿ ದೇಶ" ಎಂಬ ಕಾನ್ಸೆಪ್ಟ್ ತನ್ನ ಅರ್ಥ ಕಳೆದುಕೊಳ್ಳುತ್ತಿದೆ" ಎಂಬ ಸಂಜಯರ ಮಾತನ್ನು ನಾನು ನೂರಕ್ಕೆ ನೂರರಷ್ಟು ಒಪ್ಪುತ್ತೇನೆ. ಏಕೆಂದರೆ ಮುಕ್ತ ಆರ್ಥಿಕ ನೀತಿ, ಸಾರಿಗೆ-ಸಂಪರ್ಕ ಕ್ರಾಂತಿಯಿಂದಾಗಿ ಇಂದು ವಿಶ್ವವೇ ಒಂದು ತೆರೆದ ಬಾಗಿಲಾಗಿದೆ. ಹೀಗಿರುವಾಗ ಜಗತ್ತಿನ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯೂ ಇನ್ನೊಂದೆಡೆ ಇರುವವರೊಂದಿಗೆ ಸಂವಹನ ಮಾಡಲು ಸಾಧ್ಯವಾಗಿದೆ. ಹೀಗಿರುವಾಗ ಭೌಗೋಳಿಕ ಗಡಿ ಗೆ ಇಲ್ಲಿ ಎಲ್ಲೆ ಇಲ್ಲ.

ಈಚೆಗೆ ಇನ್ಫೋಸಿಸ್ ಸಂಸ್ಥಾಪಕ ಶ್ರೀ ನಾರಾಯಣಮೂರ್ತಿ ಅವರು ಹೇಳಿದಂತೆ, ಸ್ವತಂತ್ರ ಭಾರತದ ನಂತರ ಯಾವ ಸರಕಾರಗಳೂ ನೀಡದಷ್ಟು ಉದ್ಯೋಗಾವಕಾಶಗಳನ್ನು ಪ್ರಸಕ್ತ ಐಟಿ ಮತ್ತು ಐಟಿ ಬೆಂಬಲಿತ ಸೇವಾ (ಐಟಿ ಎನೇಬಲ್ಡ್ ಸರ್ವಿಸ್) ಉದ್ಯಮ ನೀಡಿದೆ. ಈ ಮಾತನ್ನೂ ನಾನು ಒಪ್ಪುತ್ತೇನೆ. ಇಲ್ಲದಿದ್ದರೆ ಇಂದು ಬೆಂಗಳೂರಿನಲ್ಲಿ ಕೇವಲ ಬಿಎ, ಬಿಕಾಂ, ಬಿಎಸ್ಸಿ ಕಲಿತ ಯುವಕ-ಯುವತಿಯರಿಗೆ ಕಾಲ್ ಸೆಂಟರ್ ಮತ್ತು ಬಿಪಿಒ ಗಳಲ್ಲಿ ಉದ್ಯೋಗ ಎಲ್ಲಿ ಸಿಗುತ್ತಿತ್ತು?

ಕಡಿಮೆ ಹಣಕ್ಕೆ ಭಾರತೀಯರನ್ನು ದುಡಿಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳು ಶೋಷಣೆ ಮಾಡುತ್ತಿವೆ ಎಂಬ ಆರೋಪಗಳು ಇನ್ನೊಂದೆಡೆ ಇದ್ದರೂ, ಮಾನವ ಸಂಪನ್ಮೂಲವೇ ಭಾರತದ ಬಹುದೊಡ್ಡ ಶಕ್ತಿಯಾಗಿರುವಾಗ ನಿರುದ್ಯೋಗದಿಂದ ಅಂಡಲೆಯುವುದಕ್ಕಿಂತತಿಂಗಳಿಗೆ 8-10 ಸಾವಿರ ರೂಪಾಯಿ ಸಂಬಳ ತರುವ ಇಂಥ ಕೆಲಸ ಒಳ್ಳೆಯದಲ್ಲವೇ? ಟೀಕೆ ಮಾಡುವವರು, ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಬಗೆಹರಿಸುವ ಬಗ್ಗೆ ಕಾರ್ಯರೂಪಕ್ಕೆ ಇಳಿಸುವ ಸಲಹೆಗಳನ್ನು ನೀಡುತ್ತಾರಾ? ಉಹ್ಜ್ಞೂ ಇಲ್ಲ.

ಜಾಗತೀಕರಣವನ್ನು ನಾವು ಒಪ್ಪುತ್ತೇವೋ ಬಿಡುತ್ತೇವೆ ಅದು ಬೇರೆ ಮಾತು. ಆದರೆ ಇದು ಇಂದು ಅನಿವಾರ್ಯವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಉದಾಹರಣೆಗೆ ಜಾಗತೀಕರಣದ ಗಾಳಿಗೆ ಮೈ ಒಡ್ಡಿಕೊಂಡ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳು ಹೇಗೆ ಬೆಳೆದವು ಹಾಗೂ ಕಮ್ಯುನಿಸ್ಟ್ ಕಟು ಸಿದ್ಧಾಂತಕ್ಕೆ ಕಟ್ಟು ಬಿದ್ದ ಕೇರಳ ಶೇಕಡಾ ನೂರರಷ್ಟು ಸಾಕ್ಷರತೆ ಇದ್ದರೂ ಹೇಗೆ ಹಿಂದುಳಿಯಿತು ಎಂಬುದನ್ನು ಗಮನಿಸಿದರೇ ಗೊತ್ತಾಗುತ್ತದೆ ವ್ಯತ್ಯಾಸ. ಇಂದು ಕೇರಳದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪಾಸಾದವರೂ ರಿಕ್ಷಾ ಓಡಿಸುತ್ತಿದ್ದಾರೆ ಎಂಬುದು ಅಲ್ಲಿನ ಪರಿಸ್ಥಿತಿಗೆ ಹಿಡಿದ ಕನ್ನಡಿ.

"ಇಂಗ್ಲಿಷ್ ಮಾತನಾಡುವಾಗ ನನಗೊಂಥರ ಕೀಳರಿಮೆ ಕಾಡುತ್ತೆ" ಎಂದು ಈಚೆಗೆ ಬಾಲಿವುಡ್ ನ ಪ್ರತಿಭಾನ್ವಿತ ನಟ ನಾನಾ ಪಾಟೇಕರ್ ಹೇಳಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ನಮ್ಮಂತೆ ಭಾಷಾ ಮಾಧ್ಯಮದಲ್ಲೇ ಕಲಿತು ಉದ್ಯಮದಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆದರೂ ನಾನಾಗೆ ಇಂಗ್ಲಿಷ್ ಹೇಗೆ ಕಾಡಿದೆ ಎಂಬುದಕ್ಕೆ ಈ ಹೇಳಿಕೆ ಸಾಕ್ಷಿ.

ಏತನ್ಮಧ್ಯೆ, ಒಂದನೇ ತರಗತಿಯಿಂದ ಇಂಗ್ಲಿಷ್ ಸದ್ಯಕ್ಕಿಲ್ಲ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಶಿಕ್ಷಕರ ಕೊರತೆಯೇ ಇದಕ್ಕೆ ಕಾರಣ ಎಂದೂ ಅವರು ಹೇಳಿದ್ದಾರೆ. ರಕ್ಷಣೆ, ಭದ್ರತೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಸರಕಾರಕ್ಕೆ ಶಿಕ್ಷಣ ಒಂದು ಮಹತ್ವದ ವಿಷಯ ಎಂಬುದು ಅರಿವಾಗುವುದು ಯಾವಾಗ?

ಇನ್ನು, ಜಪಾನಿನಲ್ಲಿ ಇಂಗ್ಲಿಷ್ ಕಲಿಕೆಯ ಬಗ್ಗೆ ಈಗ ಉಂಟಾಗಿರುವ ಜಾಗೃತಿ ಹಾಗೂ ಅದರ ಬಗ್ಗೆ ಕೆಲವು ಮಹತ್ವದ ಮಾಹಿತಿಯಿರುವ ಪುಟ ನೀಡಿರುವ ಸಂಜಯರಿಗೆ ತುಂಬಾ ಧನ್ಯವಾದಗಳು.

ಈ ವಿಷಯದ ಬಗ್ಗೆ ಓದುಗ ಪ್ರಭುಗಳ ಸಲಹೆ-ಟೀಕೆಗಳಿಗೆ ಸ್ವಾಗತ.
---

ಈ ಚರ್ಚೆಗೆ ಅನುವು ಮಾಡಿಕೊಟ್ಟ ಪ್ರತಿಕ್ರಿಯೆಗಳನ್ನು ಈ ಕೆಳಗೆ ಕೊಟ್ಟಿದ್ದೇನೆ-

ಅಸತ್ಯಾನ್ವೇಷಿ ಹೇಳಿದ್ದು...

ಸೂಚನೆ: ನಾನು ಬರೆಯುವ ನೂರಾ ಒಂದನೇ ಕಾಮೆಂಟ್ ಅಂತ ಇದು ತಿಳಿದುಕೊಂಡು ಇದನ್ನೇ ನೂರೊಂದು ಸಲ ಓದಿಕೊಳ್ಳಿ.

ಯಾಕೆಂದರೆ ನಾನು ಕೂಡ ನಿಮ್ಮ ಸಂತಾನದವ. ಅಂದರೆ ನಮ್ಮ ಮಕ್ಕಳ ಭವಿಷ್ಯ ಭದ್ರವಾಗಿರಬೇಕಾದರೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಬೋಧನೆ ಆರಂಭವಾಗಬೇಕು ಎಂದು ಹೇಳುವವ.

ಇದಕ್ಕೆ ನನ್ನ ಜೀವನದ ಸ್ವಾನುಭವವೇ ಉದಾಹರಣೆ. ಕನ್ನಡ ನಾಡಿನಲ್ಲೇ ಉನ್ನತ ಕೆಲಸ ನಿಮಗೆ ದೊರೆಯಬೇಕೇ? ಅರಳು ಹುರಿದಂತೆ ಇಂಗ್ಲಿಷ್ ಮಾತನಾಡುವುದು ಅತ್ಯವಶ್ಯಕ. ಈಗ ಬೆಂಗಳೂರನ್ನೇ ನೋಡಿ. ದೊಡ್ಡ ದೊಡ್ಡ ಐಟಿ, ಬಿಟಿ ಕಂಪನಿಗಳು ಅಲ್ಲಿವೆ. ಅಲ್ಲಿಯೂ ಕೆಲವು ಕನ್ನಡಿಗರು ಉನ್ನತ ಹುದ್ದೆಗಳಲ್ಲಿ ಮೆರೆಯುತ್ತಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತೇ? ಅವರು ಇಂಗ್ಲಿಷ್ ಪಟಪಟನೆ ಮಾತನಾಡುತ್ತಾರೆ, ಕನ್ನಡ ಬಿಟ್ಟು ಬೇರೆಲ್ಲಾ ಭಾಷೆ ಬರುತ್ತದೆ!

ಇಂದಿನ ದಿನಗಳಲ್ಲಿ ಹಣವೇ ಮುಖ್ಯವಾಗಿರುವಾಗ ಸ್ಥಳೀಯ ಕಂಪನಿಗಳ ಉದ್ಯೋಗದ ಬದಲು ಕೈತುಂಬಾ ಅಲ್ಲದಿದ್ದರೂ ಜೀವನಕ್ಕಾಗುವಷ್ಟು ಸಂಪಾದನೆಗೆ ಅವಕಾಶ ಮಾಡಿಕೊಡಬಲ್ಲ ಬಹುರಾಷ್ಟ್ರೀಯ ಕಂಪನಿಗಳು, ಅವುಗಳ ಬಿಪಿಒ ಮುಂತಾದೆಡೆ ಕೆಲಸ ದೊರೆಯಬೇಕೆ ? ಇಂಗ್ಲಿಷ್ ಬೇಕೇ ಬೇಕು.

ಹಾಗಂತ ಅಚ್ಚ ಕನ್ನಡದ ಸರಕಾರಿ ಉದ್ಯೋಗ ಬೇಕೆ? ಪ್ರತಿಭೆ ಇದ್ದರೂ ಮೀಸಲಾತಿ ಎಂಬ ಸಾಗರವನ್ನು ಲಂಚ-ರುಷುವತ್ತು ನೀಡಿ ದಾಟಿ ಬರಬೇಕು...!

ಹಾಗಂತ ನಾನೇನೂ ಕನ್ನಡ ವಿರೋಧಿಯಲ್ಲ. ಈಗಲೂ ಇಂಗ್ಲಿಷನ್ನು ಪ್ರೀತಿಸಲೂ ಇಲ್ಲ. ಇದಕ್ಕಾಗಿ ಕನ್ನಡದಲ್ಲೇ ಬೊಗಳೆ ಬಿಟ್ಟು ರಗಳೆ ಮಾಡುತ್ತಿರುವೆ.

ಇನ್ನು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ವಿಷಯ. ಏನು ಮಾಡಬೇಕಿದ್ದರೂ ಅದಕ್ಕೆ ಪ್ರತಿಫಲ ಇರಬೇಕು ಎನ್ನುವ ಕಾಲವಿದು. ಹೀಗಿರುವಾಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತರೆ ಕನ್ನಡಿಗರಿಗೆ ದೊರೆಯುವ ಪ್ರತಿಫಲ ಏನು? ತಮಿಳಿಗೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿ ಆದ ಪ್ರಯೋಜನ ಏನು?

4:59 PM, April 20, 2006

---

ಸಾರಥಿ ಹೇಳಿದ್ದು...

ಆಂಗ್ಲ ಭಾಷೆ ಮೇಲೆ ನಾವು ಬಹಳಷ್ಟು ಅವಲಂಬಿತರಾಗಿದ್ದೇವೆ ಎಂದರೆ ಇದರ ಅರ್ಥ ನಮ್ಮ ದೇಶ ಇನ್ನೂ ಸ್ವಾವಲಂಬಿಯಾಗಿಲ್ಲ ಎಂದೇ ಆಗುತ್ತದೆ. ಅದೇನೇ ಇರಲಿ, ಪ್ರಸ್ತುತ ಭಾರತದಲ್ಲಿ ಆಂಗ್ಲ ಭಾಷೆ ಅನಿವಾರ್ಯವಾಗಿಬಿಟ್ಟಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಏಕೆ, ಹೇಗೆ ಎಂಬ ಚರ್ಚೆಯನ್ನು ಮುಂದೆ ನಡೆಸಬಹುದು. ಆದರೆ ಒಂದು ಮಾತು,... ಶಿಕ್ಷಣ ಯಾವುದಿದ್ದರೂ ಮಾತೃಭಾಷೆಯಲ್ಲಿದ್ದರೇ ಚೆನ್ನ. ಜಗತ್ತಿನ ಅಆಇಈ ಅರಿಯಲು ತಾಯ್ನುಡಿಗೆ ಮಿಗಿಲಾದದ್ದುಂಟೆ. ಭಾರತದಲ್ಲಿ ಬಹುತೇಕ ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವಂತೆ, ಶಾಲಾ ಮಟ್ಟದಲ್ಲಿ ಮಾತೃಭಾಷಾ ಮಾಧ್ಯಮದ ಮೂಲಕ ಶಿಕ್ಷಣ ನಡೆಯಬೇಕು ಹಾಗೂ ಜತೆಜತೆಗೆ ಆಂಗ್ಲ ಭಾಷೆ ಕಲಿಕೆಯನ್ನೂ ಕಡ್ಡಾಯಗೊಳಿಸಬೇಕು ಎಂಬುದು ನನ್ನ ಅನಿಸಿಕೆ.

6:22 PM, April 20, 2006
-----

ವಿಶ್ವನಾಥ ಬಸವನಾಳಮಠ ಹೇಳಿದ್ದು...

ಅಸತ್ಯಾನ್ವೇಷಿಗಳು ಬರೆದ ಪ್ರತಿಕ್ರಿಯೆಯನ್ನು ಅವರೇ ಹೇಳಿದಂತೆ ನೂರಾ ಒಂದು ಸಲ ಓದಿದ್ದೇನೆ. ಕನ್ನಡನಾಡಿನಲ್ಲಿ ಇಂಗ್ಲಿಷ್ ಅರಿಯುವಿಕೆ ಬಗ್ಗೆ ಅವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಎಂಬುದು ಇಲ್ಲವೇ ಇಲ್ಲ. ಇಂದು ಇಂಗ್ಲಿಷ್ ಇದ್ದರೆ ಮಾತ್ರ

ಎಲ್ಲ, ಇಲ್ಲದಿದ್ದರೆ ಏನೂ ಇಲ್ಲ ಎನ್ನುವ ಮನೋಭಾವ ಬೆಳೆದಿದೆ. ನಮ್ಮ ದೇಶದ ಆಳುವವರ ನೀತಿಯಿಂದಾಗಿ ಇಂಗ್ಲಿಷ್ ಅನಿವಾರ್ಯವೂ ಆಗಿಬಿಟ್ಟಿದೆ. ಕನ್ನಡಿಗರಾದ ನಮಗೆ ಕನ್ನಡದ ಮೇಲೆ ನಮಗೆ ಎಂದೆಂದಿಗೂ ಅಭಿಮಾನ ಇದ್ದೇ

ಇರುತ್ತದೆ, ಆದರೆ ಈ ಅಭಿಮಾನ ನಮ್ಮ ಹೊಟ್ಟೆ ತುಂಬಿಸುವುದಿಲ್ಲ ಇದಕ್ಕೆ ಇಂಗ್ಲಿಷ್ ಬೇಕೇ ಬೇಕು. ಇಂಗ್ಲೆಂಡಿನಲ್ಲಿ ಕಲಿತು ಭಾರತದಲ್ಲಿ ಇಂಗ್ಲಿಷ್ ಕಲಿಸಿದವರು ಕನ್ನಡದ ಬಗ್ಗೆ ಏನೇ ಹೇಳಲಿ, ಗ್ರಾಮೀಣ ಪ್ರದೇಶದಿಂದ ಬಂದ ನಾವು,

ನಮ್ಮ ಮಕ್ಕಳೂ ಕಷ್ಟ ಪಡವುದು ಬೇಡದಿದ್ದರೆ ಒಂದನೇ ತರಗತಿಯಿಂದಲೇ ಶಿಸ್ತುಬದ್ಧ ಇಂಗ್ಲಿಷ್ ಕಲಿಕೆ ಅನಿವಾರ್ಯ. ಇನ್ನು ಶ್ರೀಮಂತ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವ ಬಗ್ಗೆ ಹೋರಾಟ ಮಾಡುವುದರಲ್ಲಿ ತಪ್ಪೇನಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

4:49 PM, April 21, 2006
---

ವಿಶ್ವನಾಥ ಬಸವನಾಳಮಠ ಹೇಳಿದ್ದು...

ಸಾರಥಿಯವರೇ,
ನಮ್ಮ ದೇಶ ಸ್ವಾವಲಂಬಿಯಾಗಿಲ್ಲ, ಆಗುವುದೂ ಇಲ್ಲ. ಆಡಳಿತವಿರಬಹುದು ಅಥವಾ ಕಾನೂನಾಗಿರಬಹುದು ಸುಮಾರು ಅರ್ಧ ಶತಮಾನಗಳ ಹಿಂದೆಯೇ ಬ್ರಿಟೀಶರು ಬಿಟ್ಟು ಹೋದ ಕಂದಾಚಾರಗಳನ್ನು ನಾವಿನ್ನೂ ಚಾಚೂ ತಪ್ಪದೇ ಪಾಲಿಸುತ್ತಿದ್ದೇವೆ. ಅದರಲ್ಲಿ ಇಂಗ್ಲಿಷ್ ಕೂಡ ಒಂದು. ಈಗ ನಮಗೆ ಇಂಗ್ಲಿಷ್ ಬಿಟ್ಟಿರದಂಥ ಅನಿವಾರ್ಯ ಪರಿಸ್ಥಿತಿ ಒದಗಿದೆ. ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ, ಇಂಗ್ಲಿಷ್ ಕಲಿಯುವುದರಿಂದ ನಮಗೆ ಲಾಭವೇ ಹೆಚ್ಚು. ಆದ್ದರಿಂದ ಇದನ್ನು ಒಂದನೇ ತರಗತಿಯಿಂದ ಕಲಿಸುವುದು ಅನಿವಾರ್ಯ ಕರ್ಮ!

4:54 PM, April 21, 2006

----
ಸಂಜಯರು ಹೇಳಿದ್ದು...

ವಿಶ್ವನಾಥರವರೇ,
ಜಾಗತೀಕರಣದ ಇಂದಿನ ದಿನಗಳಲ್ಲಿ "ಸ್ವಾವಲಂಬಿ ದೇಶ" ಎಂಬ ಕಾನ್ಸೆಪ್ಟ್ ತನ್ನ ಅರ್ಥ ಕಳೆದುಕೊಳ್ಳುತ್ತಿದೆ ಎನ್ನಿಸುತ್ತದೆ. ಅಮೆರಿಕ, ಜಪಾನ್ ಚೈನಾಗಳೂ ಸಹ ಒಂದಕ್ಕೊಂದು ಅವಲಂಬಿಸಿಯೇ ಇವೆ. ಇದು ಬಹು ಮಟ್ಟಿಗೆ ಒಳ್ಳೆಯದೇ. ಪರಸ್ಪರ ವಾಣಿಜ್ಯ ಸಂಬಂಧ ಇದ್ದಾಗ ಎರಡು ದೇಶಗಳ ಮಧ್ಯೆ ಎಂತಹುದೇ ವಿವಾದ-ಸಂಘರ್ಷ ಇದ್ದರೂ, ಅದು ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಡುವುದು ಕಡಿಮೆ.

ಇನ್ನು ಆಂಗ್ಲ ಭಾಷೆಯ ಕಲಿಕೆಯ ವಿಚಾರ. ನಾನು ನಿಮ್ಮ (ಮತ್ತು ಅನ್ವೇಷಿಗಳ) ಮಾತನ್ನು ಒಪ್ಪುತ್ತೇನೆ. ಆಂಗ್ಲ ಭಾಷೆ ಇಂದು ಅನಿವಾರ್ಯವಾಗಿ ಬಿಟ್ಟಿದೆ. ಇದು ಭಾರತ ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ; ಜಪಾನಿನಲ್ಲಿ ಇಂಗ್ಲೀಷಿನ ಕುರಿತ ಈ ಲೇಖನ ಓದಿ. ಆ ಲೇಖನದ ಮುಖ್ಯಾಂಶಗಳು:

"English is a compulsory subject in Japanese schools. In fact, it is the only foreign languages that the vast majority of Japanese schools provide. All Japanese people now have at least 6 years of English at school, and 4 more years if they go to university. It is now common for Japanese parents to make their children learn English from the age of 5 or 6 in English schools or juku. Japan certainly has more private English conversation schools per square meter than anywhere else on earth."

ಚರ್ಚೆಗೆ ಅನುವು ಮಾಡಿಕೊಡುವ ಲೇಖನ ಬರೆದಿದ್ದೀರಿ. ಧನ್ಯವಾದಗಳು.

ವಂದನೆಗಳೊಂದಿಗೆ,

"ಸಂಜಯ"

3 Comments:

At 4:54 PM, April 22, 2006, Blogger Anveshi said...

ವಿಶ್ವನಾಥರೆ,
ನೀವಂದಂತೆ, ಆಳುವವರ ದಪ್ಪ ಚರ್ಮಕ್ಕೆ ಸ್ಪರ್ಶಜ್ಞಾನವೇ ಇಲ್ಲದಿರುವಾಗ, ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಿಸುವುದು ಕನಸಿನ ಮಾತು.

ಸಂಜಯರು ಧೃತರಾಷ್ಟ್ರನಿಗೂ ಅರಿವಾಗುವ ರೀತಿಯಲ್ಲಿ ನೀಡಿದ ಜಪಾನ್-ಇಂಗ್ಲಿಷ್ ಥಳುಕು ಹಾಕುವ ಲಿಂಕ್ ಮತ್ತು ಅವರೇ (ಉದಾ: ತಮ್ಮ ಕಾಮೆಂಟ್‌ನಲ್ಲಿ ನೀಡಿದ ಇಂಗ್ಲಿಷ್ ಅಕ್ಷರಗಳನ್ನು ಓದಲಾದರೂ....) ಇಂಗ್ಲಿಷ್ ಅಗತ್ಯ ಎಂಬ ಮೂಲಭೂತ ಅಗತ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಸಂಜಯರು ಪ್ರಯೋಗಿಸಿರುವ ಅನಿವಾರ್ಯತೆ ಎಂಬ ಪದಕ್ಕೆ ಜೋತುಬಿದ್ದೇ ನಾವು (ಅಂದರೆ ಭಾರತೀಯರು ಎನ್ನೋಣವೇ?) ಬದುಕುತ್ತಿದ್ದೇವೆ ಅನ್ನೋದು ಸೂರ್ಯನಷ್ಟೇ ಸತ್ಯ.

ಸಾರಥಿಯವರು "ಶಿಕ್ಷಣ ಯಾವುದಿದ್ದರೂ ಮಾತೃಭಾಷೆಯಲ್ಲಿದ್ದರೇ ಚೆನ್ನ. ಜಗತ್ತಿನ ಅಆಇಈ ಅರಿಯಲು ತಾಯ್ನುಡಿಗೆ ಮಿಗಿಲಾದದ್ದುಂಟೆ" ಎಂದು ಕೇಳಿದ್ದಾರೆ. ಜಗತ್ತಿನ ಅರಿವಿಗೆ ತಾಯ್ನುಡಿ ಬೇಕು ಎಂದು ಒಪ್ಪೋಣ. ಆದರೆ ಶಿಕ್ಷಣ ಮಾತೃಭಾಷೆಯಲ್ಲೇ ಇರಲಿ ಎನ್ನುವುದು ಒಪ್ಪತಕ್ಕದ್ದಲ್ಲ. ಇದನ್ನು ಮಾತೃಭಾಷೆಯಲ್ಲೂ ಶಿಕ್ಷಣವಿರಲಿ ಎಂದು ಬೇಕಿದ್ದರೆ ಬದಲಾಯಿಸಿಕೊಳ್ಳಬಹುದು.

ಶ್ರೀನಿವಾಸ್ (ಮಾವಿನಯನಸ) ಅವರ ಅಭಿಪ್ರಾಯದ ಪ್ರಕಾರ, ನಮ್ಮ ದೇಶಕ್ಕೊಂದು ಯೂನಿಕೋಡ್‌ನಂತಹ ಏಕಪ್ರಕಾರವಾದ ಭಾಷೆ ಬರಲಿ ಎಂದು ಕಾಯೋಣ.
ಅಷ್ಟರವರೆಗೆ ಇಂಗ್ಲಿಷ್ ಹಿಡಿದುಕೊಂಡು ಹೊಟ್ಟೆ ತುಂಬಿಸೋಣ, ಕನ್ನಡವನ್ನು ಜತನವಾಗಿ ಕಾಯ್ದುಕೊಂಡು ಪ್ರೀತಿಸೋಣ.

 
At 8:17 PM, April 22, 2006, Blogger Sarathy said...

ಅನ್ವೇಷಿಗಳೇ, "ಮಾತೃಭಾಷೆಯಲ್ಲೂ ಶಿಕ್ಷಣವಿರಲಿ" ಎಂಬ ನಿಮ್ಮ ಮಾತಿನ ಧೋರಣೆ ತರವಲ್ಲ. ಶಿಕ್ಷಣ ಎಂಬುದು ಕಲಿಕೆಗಾಗಿ ಮತ್ತು ಅರಿವಿಗಾಗಿ ಎಂಬುದು ನೆನಪಿರಲಿ. ನಾವು ಇಂಗ್ಲೀಷ್ ಅನ್ನು ಕಲಿಯಬೇಕೆ ಹೊರತು ಇಂಗ್ಲೀಷ್ ಮೂಲಕ ಕಲಿಯುವುದಲ್ಲ. ಆಂಗ್ಲ ಮಾಧ್ಯಮದಲ್ಲಿ ಓದಿ ತಾನು ಓದಿದ್ದರ ತಲೆಬುಡ ಅರ್ಥವಾಗದೇ ಹೇಗೋ ಪಾಸಾಗಿ ಶಾಲೆ ಕಾಲೇಜುಗಳಿಂದ ಹೊರಬರುವ ವ್ಯಕ್ತಿಯಿಂದ ನೀವು ಏನು ನಿರೀಕ್ಷೆ ಮಾಡುತ್ತೀರಿ?

 
At 1:27 PM, April 24, 2006, Blogger Anveshi said...

ಸಾರಥಿಯವರೆ,
ಶಿಕ್ಷಣ ಇರುವುದು ಕಲಿಕೆಗಾಗಿ ಮತ್ತು ಅರಿವಿಗೆ ಎಂಬುದು ಸರಿ. ಆದರೆ ಶಿಕ್ಷಣಕ್ಕೆ ಇಂಗ್ಲಿಷ್ ಅನಿವಾರ್ಯ ಎಂಬುದಕ್ಕೆ ಮೂಲ ಕಾರಣವೆಂದರೆ ಬಡ ಗ್ರಾಮೀಣ ಮಕ್ಕಳು ಕೂಡ ನಿರರ್ಗಳವಾಗಿ, ಕೀಳರಿಮೆಯಿಲ್ಲದೆ ಪೇಟೆಯ ಪ್ರತಿಭಾವಂತರಂತೆಯೇ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲಿ ಎಂದು.

ಆಂಗ್ಲ ಭಾಷೆಯಲ್ಲಿ ಓದಿದವರು ತಲೆಬುಡ ಗೊತ್ತಾಗದೆ ಹೊರಬರುತ್ತಾರೆ ಎಂಬುದು ಕೇವಲ ಒಂದು ಸೀಮಿತ ವರ್ಗಕ್ಕೆ ಅನ್ವಯಿಸಬಹುದಾದ ವಿಷಯ. ಮಾತೃಭಾಷೆಯಲ್ಲಿ ಓದಿದವರಿಗೂ ಈ ಪರಿಸ್ಥಿತಿ ಎಷ್ಟು ಮಂದಿಗಿಲ್ಲ?

ಗಣಿತ, ವಿಜ್ಞಾನದ ಸೂತ್ರಗಳು ಮಾತೃಭಾಷೆಗೆ ತರ್ಜುಮೆಗೊಂಡಾಗ ಅವುಗಳು ಅರ್ಥ ಕಳೆದುಕೊಂಡು ಪ್ರಾಥಮಿಕ-ಪ್ರೌಢ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಂತಾಗುತ್ತದೆ ಮತ್ತು ಅದನ್ನು ಉರು ಹೊಡೆಯುವುದು ಬಿಟ್ಟು ಅನ್ಯ ಮಾರ್ಗವೇ ಇಲ್ಲ ಎಂಬ ಸ್ಥಿತಿ ಉದ್ಭವವಾಗುತ್ತದೆ. ಇದೇ ಸೂತ್ರಗಳು ಉನ್ನತ ಶಿಕ್ಷಣದ ವೇಳೆಯೂ ಮತ್ತೆ ಬರುವುದರಿಂದ ಆಗ ಇಂಗ್ಲಿಷಿನಲ್ಲೇ ಅದನ್ನು ಕಲಿಯಬೇಕಾದ ಸ್ಥಿತಿ.

ಒಂದಂತೂ ಸತ್ಯ. ಕಾಲೇಜು ಅಥವಾ ಯಾವುದೇ ಉನ್ನತ ಪದವಿ ಪಡೆಯಬೇಕಿದ್ದರೆ ಆಂಗ್ಲ ಬೋಧನೆಯೇ ಮೂಲಾಧಾರ (ಹಾಗಂತ ನಮ್ಮ ಶಿಕ್ಷಣ ವ್ಯವಸ್ಥೆಯೇ ಅಲಿಖಿತ ನಿಯಮ ಮಾಡಿಬಿಟ್ಟಿದೆ ಎನ್ನೋಣ). ಅಲ್ಲಿ ಗಣಿತ-ವಿಜ್ಞಾನದ ಸೂತ್ರಗಳನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ ಇಂಗ್ಲಿಷ್‌ನ ಮೂಲ ಜ್ಞಾನವೇ ಬೇಕು. ಯಾಕೆಂದರೆ ಇಂಗ್ಲಿಷ್‌ನ ಒಂದೊಂದು ಶಬ್ದಕ್ಕೆ ಒಂದೊಂದು ಅರ್ಥವಿರುತ್ತದೆ. ಸಂದರ್ಭಾನುಸಾರ ನಾವದನ್ನು ಬಳಸಿಕೊಳ್ಳಬೇಕಾಗುತ್ತದೆ. ಯಾವ ಸಂದರ್ಭದಲ್ಲಿ ಯಾವ ಅರ್ಥವನ್ನು ಬಳಸಬೇಕೆಂಬುದು (ಮಾತು-ಬರವಣಿಗೆಯ) ಅನುಭವದಿಂದಲೇ ಬರಬೇಕೇ ಹೊರತು ಎಲ್ಲವನ್ನೂ ಕಲಿಸುವುದು ಕಷ್ಟದ ಕೆಲಸ.

ಇದೇ ಕಾರಣಕ್ಕೆ ಆರಂಭದಿಂದಲೇ ಆಂಗ್ಲ ಶಿಕ್ಷಣವಿದ್ದರೆ ಎಲ್ಲ ಗೊಂದಲವೂ ಪರಿಹಾರವಾಗುತ್ತದೆ.

 

Post a Comment

<< Home