Saturday, May 09, 2009

ಕಪ್ಪು ಹಣವೂ ಕಂಗಾಲು ನಾಯಕರೂ...

ಈ ಲೋಕಸಭಾ ಚುನಾವಣೆಯಲ್ಲಿ ಭಾರಿ ಸುದ್ದಿಯಾಗುತ್ತಿರುವುದೆಂದರೆ ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ಭಾರತಕ್ಕೆ ತಂದೇ ಸಿದ್ಧ ಎಂದು ರಾಜಕೀಯ ಪಕ್ಷವೊಂದು ಪಣತೊಟ್ಟಿದೆ!

ಮಾಧ್ಯಮಗಳಲ್ಲಿ ಈ ಬಗ್ಗೆ ಭಾರಿ ಚರ್ಚೆಯೂ ಆಗಿದೆ. ಪರ-ವಿರೋಧ ಮಾತನಾಡುವವರ ಮೂತಿಗೆ ಮೈಕ್ ತಿವಿದು ಅವರು ಉದುರಿಸಿದ್ದನ್ನೆಲ್ಲ ನಮಗೆ ರವಾನಿಸಿಯೂ ಆಗಿದೆ!

ಸ್ವಿಸ್ ಬ್ಯಾಂಕ್ ನಲ್ಲಿ ಹಣವಿರುವ ವಿಚಾರ ನಮ್ಮ ರಾಜಕೀಯ ನಾಯಕರಿಗೆ ದಿಢೀರ್ ಆಗಿ ನೆನಪಾಗಿದ್ದದರೂ ಯಾಕೆ? ನಾನು ಶಾಲೆಗೆ ಹೋಗುತ್ತಿದ್ದಾಗಲೇ (ಸುಮಾರು 20 ವರ್ಷಗಳ ಹಿಂದೆ), ನಮ್ಮ ರಾಜ್ಯದ ಮುಖ್ಯಮಂತ್ರಿಯೊಬ್ಬರು ಬ್ಲ್ಯಾಕ್ ಮನಿ ಇಡಲೆಂದೇ ಸ್ವಿಜರ್ ಲ್ಯಾಂಡ್ ಗೆ ಹೋಗುತ್ತಾರೆ ಎಂದು ಮಾತಾಡಿಕೊಳ್ಳುತ್ತ ಹೋಗ್ತಾ ಇದ್ದೆವು. ಅಷ್ಟು ಅಥವಾ ಅದಕ್ಕಿಂತಲೂ ಹಳೆಯದಾದ ವಿಚಾರ ದಿಢೀರ್ ಅಂತ ಚುನಾವಣಾ ಸಮಯದಲ್ಲೇ ನಮ್ಮ ರಾಜಕಾರಣಿಗಳ ಮಂಡೆ ಹೂಕ್ಕು ಬಡಬಡಿಸುವಂತೆ ಮಾಡಿತು?

ಕಾರಣ ಸಿಂಪಲ್. ಈವರೆಗೆ ನಡೆದ ಚುನಾವಣೆಗಳಲ್ಲಿ ಮಂದಿರ, ಮಸೀದೆ, ಭಯೋತ್ಪಾದನೆ, ಆಲೂಗಡ್ಡೆ, ಈರುಳ್ಳಿ... ಎಲ್ಲ ವಿಚಾರಗಳೂ ಪ್ರಸ್ತಾಪವಾಗಿ ಸವಕಲಾದವು-ಅದಕ್ಕೆ ಸ್ವಲ್ಪ ಹೊಸತನವಿರಲಿ ಎಂದು ಯೋಚಿಸಿರಬಹುದು ನಮ್ಮ ರಾಜಕಾರಣಿಗಳು.

ನಮ್ಮವರಿಗೆ ಸ್ವಿಸ್ ಬ್ಯಾಂಕ್ ನಿಂದ ಕಪ್ಪು/ಕಡುಗಪ್ಪು ಹಣ ತರುವ ಬಗ್ಗೆ ನಿಜವಾದ ಕಾಳಜಿ ಇದೆ ಎಂದೇ ಅಂದುಕೊಂಡರೂ, ಈ ರೀತಿ ಟಾಮ್ ಟಾಮ್ ಮಾಡಿದರೆ ಹಣ ಇತ್ತವರು ಅಲ್ಲೇ ಇಟ್ಟು ಇವರು ಬಂದು ತೆಗೆದುಕೊಂಡು ಹೋಗಲಿ ಎಂದು ನಿರುಮ್ಮಳವಾಗಿರುತ್ತಾರಾ?


ನಿಜವಾಗಿ ಕಪ್ಪು ಹಣ ಪತ್ತೆ ಹಚ್ಚುವ ಬಗ್ಗೆ ಇವರಿಗೆ ನಿಜವಾಗಿಯೂ ಕಾಳಜಿ ಇದ್ದಾರೆ , ಅದನ್ನು ತಮ್ಮ ಕಾಲಬುಡದಿಂದಲೇ ಆರಂಭಿಸಬೇಕು. ಇದಕ್ಕಾಗಿ ಇವರೇನು ಸ್ವಿಜರ್ ಲ್ಯಾಂಡ್ ವರೆಗೆ ಪಾದ ಬೆಳೆಸಬೇಕಿಲ್ಲ!

ಈಚೆಗೆ ಚುನಾವಣಾ ನಾಮಪತ್ರ ಸಲ್ಲಿಸುವಾಗ ಪ್ರತಿಯೊಬ್ಬ ರಾಜಕಾರಣಿಯೂ ಘೋಷಿಸಿದ ಆಸ್ತಿ ನೋಡಿದರೆ, ನಿಜವಾಗಿಯೂ ದುಡಿದು ಸಂಪಾದಿಸಿದವರು, ತೆರಿಗೆ ಕಟ್ಟಿದವರು ಇಷ್ಟು ಹಣ ಗಳಿಸಲು ಸಾಧ್ಯವೇ ಎಂಬುದು ಅನ್ನಿಸುವುದಿಲ್ಲವೇ? ಇನ್ನು ಇವರು ರಾಜಾರೋಷವಾಗಿ ಘೋಷಿಸಿದ್ದೆ ಇಷ್ಟಾದರೆ ಗುಳುಂ ಮಾಡಿದ್ದು ಎಷ್ಟಿರಬಹುದು? ಹತ್ತಾರು, ನೂರಾರು ಕೋಟಿ ರೂಪಾಯಿ ಘೋಷಿಸಿದವರೆಲ್ಲ ಮಹಾರಾಜರೇ, ಚಕ್ರವರ್ತಿಗಳೇ? ಖಂಡಿತ ಅಲ್ಲ ನಮ್ಮ ಸೇವೆಗೆ ಟೊಂಕ ಕಟ್ಟಿ ನಿಂತ ಮಹಾ ಸೇವಕರಿವರು! ಈ ಮಹಾ ಸೇವಕರು ಖಾದಿ ಧರಿಗಳಾಗುವುದಕ್ಕಿಂತ ಮುನ್ನ ಎಷ್ಟು ಆಸ್ತಿ ಹೊಂದಿದ್ದರು, ಖಾದಿಧಾರಿಗಳಾದ ಮೇಲೆ ಎಷ್ಟು ಕಪ್ಪ ಪಡೆದರು, ದಿನೇ ದಿನೇ ಆ ಕಪ್ಪವೇ ಹೇಗೆ ಕಡುಗಪ್ಪು ಹಣವಾಯಿತು ಎಂಬುದರ ಮೂಲವನ್ನು ಬೆನ್ನತ್ತಿದರೆ ಸ್ವಿಜರ್ ಲ್ಯಾಂಡ್ ಬಗ್ಗೆ ಜಪಿಸಬೇಕಿಲ್ಲ!

ಸ್ವಯಂಘೋಷಿತ ಮಣ್ಣಿನ ಮಕ್ಕಳು, ಗ್ರಾಮದ ನೀರು ಕುಡಿದು ಅಲ್ಲೇ ವಾಸ್ತವ್ಯ ಮಾಡುವವರು, ಬಡತನ ನಿರ್ಮೂಲನೆ ಮಾಡುತ್ತೇನೆ ಎನ್ನುತ್ತಲೇ ಹೊಟ್ಟೆ ಬೆಳೆಸಿಕೊಂಡವರು , ಸಮರ್ಥರು -ನಿರ್ಣಾಯಕರು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿರುವವರು ಜನಸೇವೆಯನ್ನೇ ತಮ್ಮ ಕಸುಬನ್ನಾಗಿರಿಸಿಕೊಂಡು ನೂರು-ಸಾವಿರ ಕೋಟಿ ಹೇಗೆ ಸಂಪಾದಿಸಿದರು? ಮೊದಲು ಇವರ ಕಪ್ಪು ಹಣ ಹೊರಬಂದರೆ ಆ ಹಣದಲ್ಲೇ ನೂರಾರು ಸೇತುವೆಗಳನ್ನು ಕಟ್ಟಬಹುದು, ಸಾವಿರಾರು ಮೈಲಿ ರಸ್ತೆ ನಿರ್ಮಿಸಬಹುದು.

ಅಷ್ಟಕ್ಕೂ ಕಪ್ಪು ಹಣದ ವಿಚಾರ ಚುನಾವಣಾ ವಿಚಾರವಾಗಬೇಕಿತ್ತಾ? ನಮ್ಮಲ್ಲಿ ಬೇರೆ ಸಮಸ್ಯೆಗಳಿಲ್ಲವೇ ?
ಸರಕಾರಕ್ಕೆ ನಿಯತ್ತಾಗಿ ತೆರಿಗೆ ಕಟ್ಟಿದರೂ ನಮಗೆ ಉತ್ತಮ ಕುಡಿಯುವ ನೀರು ಸಿಗುತ್ತಿಲ್ಲ, ಬೆಂಗಳೂರಿನಲ್ಲಿ ದುಡಿಮೆಯ ಶೇ.30 ರಷ್ಟು ದುಡ್ಡು ಕಕ್ಕಿದರೂ ಒಂದು ಪುಟ್ಟ ಬಾಡಿಗೆ ಮನೆ ಪಡೆಯಲಾಗದ ಮಧ್ಯಮ ವರ್ಗ, ರೈತ ಬೆಳೆದ ಈರುಳ್ಳಿಗೆ ಸಿಗುವುದು ಕೇವಲ ಎರಡೇ ರೂಪಾಯಿ- ಅದೇ ಈರುಳ್ಳಿ ಮಾರುಕಟ್ಟೆಯಲ್ಲಿ ಹನ್ನೆರಡು ರೂಪಾಯಿ, ಅನಿಯಮಿತ ಮಳೆ, ಅದರಲ್ಲೂ ಬಂದ ಬೆಳೆಗೆ ಸಿಗುವುದು ಇಂಥ ಬೆಲೆ ... ಇದರಿಂದ ರೋಸಿಹೋದ ನಮ್ಮ ರೈತರ ಮಕ್ಕಳು ಬೆಂಗಳೂರಿನತ್ತ ಮುಖ ಮಾಡಿ ಕಟ್ಟಡ ನಿರ್ಮಾಣದಲ್ಲೋ , ಸೆಕ್ಯೊರಿಟಿ ಗಾರ್ಡ್ ಗಳಾಗೋ ದುಡಿಯುತ್ತಿದ್ದಾರೆ . ಇಂಥವರನ್ನು ಮೇಲೆತ್ತಲು, ನೊಂದವರಿಗೆ ನ್ಯಾಯ ಒದಗಿಸುವುದು ಚುನಾವಣಾ ವಿಷಯ ಏಕಾಗುವುದಿಲ್ಲ? ಹುಡುಕಿದರೂ ಉತ್ತರ ಸಿಗುತ್ತಿಲ್ಲ ನಿಮಗೆ ಗೊತ್ತಾದರೆ ತಿಳಿಸಿ.

0 Comments:

Post a Comment

<< Home